Saturday, February 21, 2015

ಹಾಯ್ಕುಗಳು: ಬಾಹುಬಲಿ ಮರ

ಎಲೆ ಕಳಚಿ ಸತ್ತಂತೆ ನಿಂತಿರುವ
ಮರದಲ್ಲಿ ಎಂದೋ
ಬಾಳಿದ್ದ ಸಂಸಾರದ ಗುರುತುಗಳು
.
.
ಚಳಿ ಕಳೆದದ್ದೇ ತಡ
ಬರುಬತ್ತಲಾಗಿ ನಿಂತಿದೆ ಈ
ನಾಚಿಕೆಗೆಟ್ಟ ಮರ
.
.
ಏಸುವಿನ ತಲೆಯ ಮುಳ್ಳಿನ
ಕಿರೀಟದಂತೆ ಈ ಬತ್ತಲೆಮರದಲ್ಲಿ
ಗೂಡುಗಳ ಗೊಂಚಲು
.
.
ಮತ್ತೊಂದು ವರ್ಷ ಕಳೆಯಿತೆಂದು
ದಳದಳ ಅತ್ತು ಉದುರಿದ
ಕಂಬನಿಯಂತೆ ಈ ಎಲೆ
.
.
ಪೂನಂ ಪಾಂಡೆಯಂತೆ ಮಾತು ಕೊಟ್ಟು
ಮುರಿಯುವುದಿಲ್ಲ ಎಂದಿದೆ
ಶಿಶಿರದ ಮರ
.
.
ಈ ಶಿಶಿರ ದುಶ್ಶಾಸನ
ಸೆಳೆಸೆಳೆದು ಹಾಕುತ್ತಿದ್ದಾನೆ
ಬಾರಯ್ಯ ವಸಂತ ಬೇಗ
.
.
ತಿರುಪತಿಯಲ್ಲಿ ಸಾಲಾಗಿ ಕೂತ
ತಲೆಗಳಂತೆ
ಶಿಶಿರದ ಮರಗಳು
.
.
ಮರಕ್ಕೆ ಹೆರಿಗೆಬೇನೆ
ಸೂಲಗಿತ್ತಿ ಶಿಶಿರ
ಸೀರೆ ತೆಗೆಸಿದ್ದಾನೆ
.
.
ವಿರಾಗಿ ಬಾಹುಬಲಿಯಂತೆ ನಿಂತಿದೆ
ಮರ ಎನ್ನುವಾಗಲೇ ಕಂಡಿತೊಂದು
ಎಳೆ ಚಿಗುರು
.
.
ಮರದ ಮೈಗೆ ಅಸಾಧ್ಯ ತುರಿಕೆ
ಬಟ್ಟೆ ಕಳಚಿದೆ, ಒಳಗಿಂದ
ಚಿಗುರು ಹುಟ್ಟಿದೆ

Sunday, February 15, 2015

ಉರಿ

ನಾನು ಪುಸ್ತಕ ಸುಡುತ್ತೇನೆಂದಾಗ ತಡೆದ ಧೀರರೇ..ಕೇಳಿಸಿಕೊಳ್ಳಿ

ಈ ಪುಸ್ತಕ ಸುಟ್ಟಿದೆ ನನ್ನ 
ಮನಸ್ಸಿನ ನೆಮ್ಮದಿ
ಸುಟ್ಟಿದೆ ನನ್ನ ಬುದ್ಧಿ
ಭ್ರಮಣಿಸುತ್ತ, ನೆಟ್ಟಗೆ ನಿಲ್ಲಲಾಗದೆ
ಕುಸಿದಿದ್ದೇನೆ ನೂರಾರು ಸಲ
ದ್ವೇಷಿಸುತ್ತ ಬರೆದಿದ್ದೇನೆ ನೂರಾರು ಪುಟ ರದ್ದಿ

ಕಾಡಿದೆ ಈ ಪುಸ್ತಕ ದಿನರಾತ್ರಿ
ಬೇಡದ ಕನಸಾಗಿ, ಮೂಗಿನ ಮೇಲಿನ ಕುರು-ವಾಗಿ
ನನ್ನೊಳಗಿನ ಕುರುಕ್ಷ್ಟೇತ್ರವಾಗಿ 
ಕಂಕುಳಡಿಯ ಬೊಕ್ಕೆಯಾಗಿ
ಪೃಷ್ಟದ ಮೇಲಿನ ಉರಿಹುಣ್ಣಾಗಿ, ಕಾಡಿದೆ
ಕೂಡಲಾಗದಂತೆ

ಈ ಪುಸ್ತಕ - ಬೇತಾಳನಂತೆ ನನ್ನ 
ಮನಸ್ಸಾಕ್ಷಿಯ ಕಾಡಿದಾಗ
ನನ್ನೊಳಗಿನ ಯಾವುದೋ ಮೂಲೆಯಲ್ಲಿ ಅರಳುವ 
ಭಕ್ತಿಯನ್ನು ಚಿವುಟಿ ಹಾಕಿದ್ದೇನೆ; ಒಳ್ಳೆಯತನ
ತರಿದು ಎಸೆದಿದ್ದೇನೆ; ನನ್ನೊಳಗಿನ ಅರ್ಜುನ ಈ
ಸಾವಿರದೆಂಟು ಹೆಂಡಿರ ಗಂಡನನ್ನು ಭಗವಾನ
ನೆಂದು ಒಪ್ಪಿಕೊಳ್ಳುವುದನ್ನು ಸಹಿಸದೆ ಪರಪರ
ಕೆರೆದುಕೊಂಡಿದ್ದೇನೆ, ಬರಿದೆ
ಉರಿದು ಬೂದಿಯಾಗಿದ್ದೇನೆ

ಕೇಳಿದ್ದೀರಾ ಆಗ? ನನ್ನ ಬಗ್ಗೆ ಕರುಣೆ
ತೋರಿದ್ದಿರಾ ಆಗ? ಈ ಪುಸ್ತಕ ನನ್ನ ಅಣುಅಣು
ವನ್ನೂ ಸುಟ್ಟು ಮಿದುಳನ್ನು ಹಪ್ಪಳದಂತೆ
ಕಾಯಿಸುತ್ತಿದ್ದಾಗ ಬಂದಿರಾ ನೀವು?

ಸಾಯುವ ಕಾಲಕ್ಕೆ ತೊಟ್ಟು ನೀರು ಸಿಕ್ಕ
ದಿದ್ದರೂ ಚಿಂತೆಯಿಲ್ಲ; ಬೆಂಕಿ
ಯಲ್ಲಿ ಹವಿಸ್ಸಿನಂತೆ ಅರ್ಪಿಸುತ್ತೇನೆ ಈ ಪುಸ್ತಕ
ಅಣಕಿಸುತ್ತಿದೆ ನನ್ನ; ನನ್ನ ಅಸ್ತಿತ್ವಕ್ಕೇ ಪ್ರಶ್ನೆಯಾಗಿ, ಸವಾಲಾಗಿ
ನಿಂತಿರುವ ಈ ಪುಸ್ತಕವನ್ನು
ಸುಡದೆ ನೆಮ್ಮದಿ ಇಲ್ಲ; ಆಮೇಲೂ ಸಿಕ್ಕುವುದು 
ಖಚಿತವಿಲ್ಲ

ಆದರೂ ಸುಡುತ್ತೇನೆ; ಎಲ್ಲಿ ತನ್ನಿ ಸೀಮೇಎಣ್ಣೆ, ಬೆಂಕಿ
ಕಡ್ಡಿ; ಕೊಳ್ಳಿ; ಡೈನಮೈಟು; ಬಂದೂಕು; ಹಗ್ಗ; ಉಗ್ರಗಾಮಿಗಳ
ಉಗ್ರಾಣದೆಲ್ಲ ಸಾಮಗ್ರಿ. ತನ್ನಿ. ಸುಟ್ಟೇಹಾಕೋಣ.
ಆಮೇಲೆ ಜೀವನ ಇಡೀ ಉರಿದರೂ 
ಪರವಾಯಿಲ್ಲ.