Wednesday, October 29, 2014

ರಾಧೆಯ ಶೋಕ

ಗೋಪಾಲ ಹೇಳು, ಎದೆ ಹಗುರ ಮಾಡು 
ನೀನೋಡುತಿರುವೆ ಎಲ್ಲಿ? 
ಈ ಗೋಪಬಾಲೆ ನಿನಗಾಗಿ ಕಾದು 
ಬತ್ತಿದೆನು ಯಮುನೆಯಲ್ಲಿ 

ನಿನ್ನ ಬೆರಳಾಟವಿಲ್ಲದೆ 
ನಿಟ್ಟುಸಿರಿಟ್ಟಿದೆ ಸೆರಗಂಚು 
ನಿನ್ನ ಕೊಳಲ ದನಿಗದುರುವ 
ಕಿವಿಗಳಿಗೂ ತುಸು ಸಿಹಿ ಹಂಚು 

ಬತ್ತಿದ ಕೊಳದ ಒಡೆದ ತಳದಂತೆ 
ಏತಕೆ ಈ ಮೌನ?
ಕಡಲ ನಡುವಲ್ಲಿ ಹಾಯಿ ಹರಿಯದಿರು 
ಮುಂದುವರೆಸು ಯಾನ. 

ರಾಧೆಯೊಳಗೆ ಹರಿಯುತ್ತಿದೆ ಯಮುನೆ 
ದುಃಖದ ತೆರೆಗಳ ಹೊತ್ತು 
ದುಂಬಿಗಳಿಲ್ಲದ ತೋಟದಲರಳಿದ 
ಹೂವಿಗಷ್ಟೆ ಅದು ಗೊತ್ತು 

ಬರುವನೆಂದು ಬಂದಾನೇ ಎಂದು 
ಕಾದಿರುವಳು ರಾಧೆ 
ಹೇಳದೆ ಹೋಗೇಬಿಡುವೆಯ? ಮರೆತೆಯ?
ನಾನೇಕೆ ಬೇಡವಾದೆ?

ಈ ಬೆಳುದಿಂಗಳು, ಈ ಬೃಂದಾವನ 
ತರುಲತೆಪಕ್ಷಿಯ ಶೋಕ 
ಕಂಡೂ ಕಂಡೂ ಹೋಗೇ ಬಿಡುವೆಯ?
ಕರೆಯಿತಾವ ಲೋಕ?

ಕುಳಿರ್ಗಾಳಿಯ ಕುಲುಮೆಯಲ್ಲಿ 
ಕೂತಿರುವೆನು ಕಲ್ಲಾಗಿ 
ಒಡೆದೆರಡಾದ ಬಿದಿರಿನ 
ಪ್ರೇಮಾಲಾಪದ ಸೊಲ್ಲಾಗಿ. 

(ಒಂದು ಹಳೆ-ಅಸ್ಸಾಮೀಸ್ ನಲ್ಲಿರುವ ಪದ್ಯದ ಭಾವಾನುವಾದ)