Tuesday, January 30, 2024

ಲೋಕಸಂಸಾರಿ

ಬರುವರೀಗ, ಬಂದರೇನೊ! 

ಜಗಲಿಯಾಚೆ ನಿಂದರೇನೋ!

ಹೋಗಿಬರುವೆನಮ್ಮ ನೋಡಲೊಮ್ಮೆ

ಕಳಿಸೆಯಾ?


ಹನುಮ ಹರಿಣ ವೈನತೇಯ

ಅರುಣಮಗನ ಬಳಗ ಬಂತು

ಚಿಣ್ಣಿದಾಂಡು ತಂದರೇನೋ,

ನನ್ನ ಇಳಿಸೆಯಾ?


ಬೆಳಗನೆದ್ದು ಹಲ್ಲನುಜ್ಜಿ

ಅಮರ ಹೇಳಿ ಸ್ನಾನ ಮುಗಿಸಿ

ವಿಠ್ಠಲನಾಮ ಸ್ಮರಣೆ ಮಾಡಿ

ಚಾಮಿ ಮಾಡಿದೆ


ತಿಲಕವಿಟ್ಟು ಗಂಧ ಪೂಸಿ

ತಲೆಯ ಬಾಚಿ ಜುಟ್ಟುಕಟ್ಟಿ

ಅಮ್ಮ ನೀನು ನನ್ನನೆತ್ತಿ

ಮಮ್ಮು ಉಣಿಸಿದೆ


ಹಾಲು ಕುಡಿದೆನಮ್ಮ, ಬಿಳಿಯ 

ಮೀಸೆ ಬಂದಿತಮ್ಮ, ಅದನು 

ಕಂಡು ದಾಸಿ ಬಳಗವೆಲ್ಲ 

ಬಿದ್ದುನಕ್ಕರು 


ಅವರ ಮಕ್ಕಳೆಲ್ಲ ಜೊತೆಗೆ

ಬಂದುಕೂಡಿ ಆಟವಾಡೆ

ಬಿಲ್ಲುಬಾಣ ಹೂಡಿದಾಗ

ಮರೆಯ ಹೊಕ್ಕರು


ಅಮ್ಮ ನನ್ನ ಗೆಳೆಯರೆಲ್ಲ

ಬರುವುದುಂಟು, ಬಂದರೇನೋ, 

ಶಬರಿ ಸೀಬೆ ತಂದಳೇನೋ,

ನೋಡಿ ಬರುವೆನು


ಬಟ್ಟೆಯುಟ್ಟು ಮುದ್ರೆ ತೊಟ್ಟು

ವಂಕಿ ವಾಲೆ, ಹಣೆಗೆ ಬೊಟ್ಟು

ಎಲ್ಲ ತೊಟ್ಟೆ, ಮರೆಯಲಿಲ್ಲ

ಕೊರಳ ಸರವನು


ಇಷ್ಟು ಚಂದ ಮಾಡಿಕೊಂಡು

ಅವರ ಮುಂದೆ ಹೋದರವರು

ಗುರುತು ಹಿಡಿವುದುಂಟೆ ನನ್ನ,

ರಾಜಮಾತೆಯೆ!


ರಾಜಮನೆಯ ಭೋಗಭಾಗ್ಯ

ಮೀರಿಬೆಳೆದ ಸ್ನೇಹಭಾಗ್ಯ -

ಸರಳ ಪದವ ಹಾಕಿ ಬರೆದ

ಭಾವಗೀತೆಯೆ!


ಕಾಡಹಣ್ಣು ತಂದರಮ್ಮ, 

ಕಾಡಜೇನು ಕೊಟ್ಟರಮ್ಮ, 

ಬಾಡದಂಥ ಹೂವ ಮಾಲೆ

ಕೊರಳ ಸುತ್ತಲು


ರೆಂಬೆಕೊಂಬೆ ಹತ್ತಿ ಇಳಿದು

ನದಿಯಲೀಜಿ ಗುಡ್ಡವೇರಿ

ಆಟವಾಡಿಕೊಂಡು ಬರುವೆ

ಸಂಜೆಗತ್ತಲು


ರಾಜಮಗನು ಮರೆಯಲಾರೆ

ಹೆಗಲ ಹೊಣೆಯ ಮೀರಲಾರೆ

ಉಚಿತವಲ್ಲದಂಥ ಕೆಲಸ

ನಾನು ಮಾಡೆನು


ಬೆಟ್ಟ ಬಯಲು ಹತ್ತಿಳಿದರು

ಬಟ್ಟೆ ಕೊಳೆಯ ಮಾಡೆನಮ್ಮ

ಒಮ್ಮೆ ಹೋಗಿ ಆಡಿಬರುವೆ

ಮತ್ತೆ ಬೇಡೆನು


ಒಜ್ಜೆಯಲ್ಲವೇನು ಗೆಜ್ಜೆ

ಸೊಂಟಪಟ್ಟಿ ಎದೆಯ ಪದಕ

ಗಂಧ ಕಸ್ತೂರಿ ತಿಲಕ

ಕಂಠಿ ಕಾಡಿಗೆ?


ಬಿಚ್ಚಿ ಗಳಿಗೆ ಹೋಗಿಬರುವೆ

ಅವರ ಕೂಡೆ ಸಮಯಕಳೆದು

ಸಮಯಮೀರೆ ಓಡಿಬರುವೆ

ಮರಳಿ ಗೂಡಿಗೆ


ರಾಜಗೃಹದ ನೀತಿನಿಯಮ

ಹಳ್ಳಿಗಾಡ ಜನಜೀವನ

ಎರಡೂ ಬೇಕು, ನೋಡಬೇಕು

ಲೋಕಜೀವಿ ನಾ


ಎಂದು ಮಾತೆಗೆರಗಿ ನಮಿಸಿ

ಬಂದು ಬಳಗ ಸೇರಿಕೊಂಡು

ಅಳಿಲ ಬೆನ್ನ ನೇವರಿಸಿದ

ರಘುಕುಲೋತ್ತಮ!

ಸುಂದರಕಾಂಡ

ಪಾರಾವಾರವ ದಾಟಿ ಸುದೂರದ 

ದ್ವೀಪಕೆ ಹಾರಿದ ಹನುಮ

ಸೀತೆಯ ಕಾಣುತ ನೆನೆದನು ಮನದಲಿ: 

"ಪಾವನವಾಯಿತು ಜನುಮ!"


ಸೂಜಿಯು ಕರುಳನು ಅರೆಯುವ ಹಾಗೆ 

ವನಚರ ಗೋಳಿಡುತಿತ್ತು

ದುಗುಡದ ಹಬೆಯಲಿ ಬಾಡಿದ ತಾವರೆ 

ಮೌನದಿ ಊಳಿಡುತಿತ್ತು


ಅಶೋಕವನದಲಿ ಶೋಕದ ಮಡುವಲಿ 

ಹೊರಟಿತು ವಿಷಾದಗೀತೆ;

ಹಾಡಿನ ಕಣ್ಣನು ಒರೆಸಿದ ಹನುಮ 

ಬೇಡಿದ: "ಅಳದಿರು ಮಾತೆ!


ಬರುವನು ಬರುವನು ದಶರಥಪುತ್ರನು 

ಮರೆಯದೆ ನಿನ್ನಯ ಬಳಿಗೆ

ದಶಕಂಠಗಳನು ತರಿಯದೆ ಬಿಡನು, 

ಬೇಗನೆ ಬರುವುದು ಘಳಿಗೆ!"


ಬಾಳೆಯ ತೋಟಕೆ ನುಗ್ಗಿದ ಮರಿಗಜ 

ಮಾಡಿದ ದೊಂಬಿಯ ಹಾಗೆ

ಅಶೋಕವನ ಪುಡಿಗುಟ್ಟಿದ ಹನುಮ, 

ಬೆದರಿತು ಪಿಕ ಬಕ ಕಾಗೆ


ಬಂದೇ ಬಂದಿತು ರಕ್ಕಸಸೇನೆ 

ಬೋನಲಿ ತುಂಬಲು ಕೋತಿಯನು

ತಲೆಗಳೊ ತರಗೆಲೆ ತೆರದಲಿ ಬಿದ್ದವು 

ತಾಳದೆ ವಾನರಘಾತವನು


ಕೊನೆಗೂ ರಾವಣಪುತ್ರನೆ ಬಂದ, 

ಮಾಯಾಪಾಶದ ಕುಣಿಕೆಯ ತಂದ

ವಾನರಮುಖ್ಯನ ಬಂಧಿಸಿ ರಾವಣ-

ನೆದುರಲಿ ನಿಲ್ಲಿಸಿ ನಿಂದ


ಕೇಳಿದ ದಶಮುಖ: "ತೋಟಕೆ ನುಗ್ಗಿದ 

ಕೀಟಲೆ ಕೋತಿಯು ನೀನೊ?

ತರಿಯಲೆ ತಲೆಯನು, ಸಿಗಿಯಲೆ ಎದೆಯನು, 

ಸೆರೆಮನೆಗೆಸೆಯಲೇನೊ?


ಇರುವೆಯ ಜಜ್ಜಲು ಗದೆಯನ್ನೆತ್ತಲೆ! 

ನಿನಗಿದೊ ಕ್ಷುಲ್ಲಕ ಶಿಕ್ಷೆ -

ಬಾಲಕೆ ಹಚ್ಚುವೆ ಬೆಂಕಿಯ, ಹೋಗೆಲೊ 

ಬದುಕಿಕೊ ಬೇಡುತ ಭಿಕ್ಷೆ!"


ಎನ್ನಲು ರಾವಣ, ತಂದರು ಎಣ್ಣೆಯ, 

ಹೊಸೆಯಲು ಬಟ್ಟೆಯ ತುಂಡು,

ಬೆಳೆಯಲುತೊಡಗಿದ ಬಾಲವನಳೆಯಲು 

ಬಂದಿತು ರಕ್ಕಸ ದಂಡು!


ಬೆಳೆಯುತ ಅರಮನೆ ಮೀರಿತು, ಬೀದಿಗೆ 

ಬಂದಿತು, ಕೇರಿಯ ತುಂಬ!

ಹಬ್ಬಿತು ಉದ್ದನೆ, ಇಳಿಸಿತು ಬಟ್ಟೆಯ 

ಸುತ್ತುವ ಅಸುರರ ಜಂಬ!


ಬಾಲಕೆ ಬಟ್ಟೆಯ ಸುತ್ತಲು ಅರಮನೆ 

ಗೋದಾಮುಗಳೇ ಬರಿದು,

ಗಾಣದ ಮನೆಗಳ ಉಗ್ರಾಣಗಳೇ 

ಮುಚ್ಚಿದವೆಣ್ಣೆಯ ಸುರಿದು!


ಹಚ್ಚಿದ ಬೆಂಕಿಯ ನಾಲಗೆ ನೆಕ್ಕಿತು 

ಲಂಕೆಯ ಮನೆಮಠ ಓಣಿಗಳ

ಅರಮನೆ-ಬಂಗಲೆ, ಒಳಮನೆ-ಪಡಸಲೆ, 

ದ್ವೀಪದ ಬೆಸ್ತರ ದೋಣಿಗಳ


ಹೊಗೆಯಲಿ ಮುಳುಗಿಸಿ ಲಂಕಾಪುರಿಯನು 

ವಾಯುಪುತ್ರ ಹನುಮಾನ

ಅಯ್ಯೋ ಎಂದನು ಕಳವಳಿಸುತ್ತ, 

ಹುಟ್ಟಲೊಂದು ಅನುಮಾನ - 


ಲಂಕೆಯನೇನೋ ಬೂದಿಯ ಮಾಡಿದೆ, 

ಜಾನಕಿ ಕತೆ ನಾ ಜಾನೆ!

ಬೆಂಕಿಯೆ ಸುಡುವುದೆ ಬೆಂಕಿಯ? ಬೆಂಕಿಯ 

ಮಗಳಲ್ಲವೆ ಆ ಜಾಣೆ!


ಎನ್ನುತ ವಾನರ ತಾಳಿದ ನೆಮ್ಮದಿ, 

ಲಂಕೆಯ ಸುಟ್ಟ ಮೇಲೆ

ಹಚ್ಚಿದ ಕಿಡಿಯಲಿ ನಗರವೆ ನೆಲಸಮ-

ವಾಯಿತು, ಬಾಲದ ಲೀಲೆ!


ಕೆಣಕಲು ಬಂದರೆ ಬಿಡುವನೆ ಹನುಮ, 

ಕೊಡುವನು ಉತ್ತರ ತಕ್ಕ!

ಪೈಸೆಗೆ ಪೈಸೆಯ ಚುಕ್ತಾ ಮಾಡುವ, 

ತಪ್ಪನು ಬಡ್ಡಿಯ ಲೆಕ್ಕ!


ಲಂಕಾಪುರಿಯಲಿ ಬೆಂಕಿಯ ತಾಂಡವ-

ವಾಡಿದ ಹನುಮನು ಕೊನೆಗೆ

ಶರಧಿಯ ನೀರಲಿ ಬಾಲವನಾರಿಸಿ 

ಬಂದನು ರಾಮನ ಕಡೆಗೆ


ಒಂದೇ ಇರುಳಲಿ ಪರನೆಲ ಮುಟ್ಟಿ 

ಸೀತೆಗೆ ಮುದ್ರಿಕೆಯಿತ್ತು,

ರಕ್ಕಸ ಸೊಕ್ಕನು ಮುರಿದ ಹನುಮಬಲ 

ರಾಮನಿಗಷ್ಟೇ ಗೊತ್ತು


ನಿನ್ನುಪಕಾರಕೆ ಕೊಡಲೇನಿಲ್ಲದ 

ಬಡವನೆಂಬ ಅಳು ನುಂಗಿ

ರಾಮ ಕೊಟ್ಟ ಆಲಿಂಗನಭಾಗ್ಯಕೆ 

ಕರಗಿಹೋದ ಭಜರಂಗಿ!

Friday, January 19, 2024

ಅಯೋಧ್ಯಾಗಮನ

ಹೊರಟೆವು ನಾವು, ಬರುವಿರ ನೀವು

ರಾಮನ ಮನೆಗೆ ನಮ್ಮ ಜತೆ?

ದಾರಿಯ ಖರ್ಚಿಗೆ ಬೇಕಾದಷ್ಟಿದೆ

ಹಾಡಲು ಹೇಳಲು ರಾಮಕಥೆ


ದಂಡಕೆ ದಂಡು ಹಾರಿದೆ ಬಾನಿಗೆ

ಗಿಳಿ ಗೊರವಂಕ ಗುಬ್ಬಚ್ಚಿ

ಹದ್ದಿನ ಹಾದಿಯ ಕೋಳಿಯೂ ಹಿಡಿದಿದೆ

ಸೇರುವುದೆಂತೋ ಪಾಪಚ್ಚಿ!


ಕಾಡಿನ ಸಭೆಯಲಿ ಸೇರಿವೆ ಜಿಂಕೆ

ಮೊಲ ನರಿ ಅಜ ಗಜ ಶಾರ್ದೂಲ

ದಿಬ್ಬಣ ಹೊರಟಿವೆ ರಾಮನ ಕಡೆಗೆ

ಹಾಡಿವೆ ಕೋಗಿಲೆ ಹಿಮ್ಮೇಳ


ಸಾವಿರ ಸಂಖ್ಯೆಯ ವಾನರ ಹಿಂಡು

ಉತ್ಸವ ಹೊರಟಿದೆ ಉತ್ತರಕೆ

ಮರದಲ್ಲಾಡುತ ಜಿಗಿಜಿಗಿದೋಡುತ

ಕುಪ್ಪಳಿಸುತ ಬಾನೆತ್ತರಕೆ


ರಾಮ ನಡೆದ ಗೋದಾವರಿಯಲ್ಲಿ,

ಚಿತ್ರಕೂಟದ ಕಾಡಿನಲಿ,

ಪಂಚವಟಿಯ ಜಲ ನೆಲ ಬಾನಲ್ಲಿ,

ಬೆಸ್ತರ ಬೇಡರ ಹಾಡಿಯಲಿ


ಎಲ್ಲೆಲ್ಲೂ ಹೊಸ ಸಂಭ್ರಮ ತುಂಬಿದೆ

ಹೊರಡುವ ಗಡಿಬಿಡಿ ಎಲ್ಲ ಕಡೆ

ಕೆದರಿದ ಕೂದಲ ಬಾಚಿದ ಜಾಂಬವ,

ಶಬರಿಯು ಹೆಣೆದಳು ಎರಡು ಜಡೆ


ಮಾವಿನ ತೋರಣ ಕಟ್ಟಿತು ಕರಡಿ,

ಅಳಿಲಿನ ಬಾಯಲಿ ನೆಲಗಡಲೆ,

ಹೊರಟವು ಹೂಗಳು ಬುಟ್ಟಿಯ ತುಂಬ

ಕೇಳಿತು ನಾರು: ಜೊತೆಗಿರಲೆ?


ಸರಯೂ ಜಲಚರ, ಮತಂಗ ಗಿರಿಚರ

ಎಲ್ಲವು ಹೊರಟಿವೆ ಜತೆಯಲ್ಲಿ

ಲಂಕೆಯ ವನಕೂ ಮಿಥಿಲೆಯ ಜನಕೂ

ಜಾಗವುಂಟು ಈ ಕಥೆಯಲ್ಲಿ


ರಾಮನ ಹೊಸಮನೆಯಂಗಳ ತುಂಬಿದೆ,

ಕ್ರೌಂಚವ ಹಿಡಿದಿಹ ವಾಲ್ಮೀಕಿ,

ಸುತ್ತಲ ಖಗಮಿಗವೆಲ್ಲಾ ಹಾಡಿದೆ -

ಜಯ ಬೋಲೋ ರಘುರಾಮ ಕೀ! 

ಸೀತಾರಾಮ ಹನುಮಾನ ಕೀ!

Tuesday, December 12, 2023

ನೆಲೆ

ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ
ಹಾರುವ ಹಕ್ಕಿಯು ಕೂಡ
ಮೊಟ್ಟೆಯನಿಟ್ಟು ಸಂತತಿ ಬೆಳೆಸಲು
ಕಟ್ಟುವುದಿಲ್ಲವೆ ಗೂಡ?

ವೃಕ್ಷದ ಮೇಲ್ಕೆಳಗಾಡುವ ಅಳಿಲಿಗೆ
ಬೆಚ್ಚನೆ ಪೊಟರೆಯ ರಕ್ಷೆ
ವಿಶ್ವದ ಅಂಗಳ ತಮ್ಮದೆ ಆದರೂ
ಗ್ರಹಗಳು ಬಿಡುವವೆ ಕಕ್ಷೆ?

ಭಾಷೆಗೆ ನಾಲಗೆ, ಭಾವಕೆ ಹೃದಯ,
ಸ್ವರಕ್ಕೆ ತಂತಿಯೆ ಮನೆ
ತಾರೆಗಳೆಷ್ಟೋ ಅಷ್ಟೂ ಮನೆಗಳೇ,
ಅಣುವಿಗೆ ಸೂಜಿಯ ಮೊನೆ

ವಿರಾಗಮೂರ್ತಿಗೆ ಬಯಲೇ ಆಲಯ,
ಇಪ್ಪತ್ತೇಳು ಮನೆ ಚಂದ್ರನಿಗೆ,
ಪರ್ಣಕುಟೀರ ಋಷಿಮುನಿಗಳಿಗೆ,
ಸ್ವರ್ಗದ ಅರಮನೆ ಇಂದ್ರನಿಗೆ

ವನರಾಜನ ಮನೆ ಗುಹೆಯೊಳಗೆ,
ಹಾವಿಗೆ ಮೃಣ್ಮಯ ಹುತ್ತ
ಕಡಲಿಗೆ ಹೊರಟರೂ ಸಾಲ್ಮನ್ ಮೀನಿಗೆ
ಹುಟ್ಟಿದ ತೊರೆಯಲೆ ಚಿತ್ತ

ಮುಗಿಲಿಗೆ ಚಾಚಿದ ಹಣ್ಣೆಲೆ ಬಿದ್ದರೆ
ಬೇರಿಗೇ ಬರಬೇಕು
ಎಲ್ಲೆಡೆ ಓಡುವ ರೈಲನ್ನು
ನಿಲ್ದಾಣಕೇ ತರಬೇಕು

ಕುಟುಂಬವತ್ಸಲ - ಜಗದೊಡೆಯ
ಎಂಬೆರಡು ಹೊಣೆಯ ಮಧ್ಯೆ
ತೋಲನ ತೂಗುವ ಪುರುಷೋತ್ತಮನಿಗು
ಇಹ ನೆಲೆ: ಅಯೋಧ್ಯೆ.

Thursday, May 28, 2020

ಆತ್ಮಬಲ

ಅನಾದಿ ನಾ, ಅನಂತ ನಾ, ಅವಧ್ಯ ನಾ ಕಣಾ!
ಕೊಲ್ಲ ಬಂದ ವೈರಿಗೂ ಮೃತ್ಯು ನಾ ಕಣಾ!

ಧರ್ಮಕಹಳೆ ಮೊಳಗಿಸುವೆ
ಮೃತ್ಯುವನ್ನೆ ಮಲಗಿಸುವೆ
ಯುದ್ಧಭೂಮಿಯಲ್ಲಿ ಯೋಧನಾಗಿ ಸೆಣಸುವೆ!
ಖಡ್ಗ ಎನ್ನ ಕತ್ತರಿಸದು
ಅಗ್ನಿ ಎನ್ನ ಹೊತ್ತುರಿಸದು
ಎರಗಿ ಬಂದ ಮರಣಪಕ್ಷಿಯನ್ನೆ ಮಣಿಸುವೆ!

ಅನಾದಿ ನಾ, ಅನಂತ ನಾ, ಅವಧ್ಯ ನಾ ಕಣಾ!
ಪಾಶ ಕಂಡು ಬೆದರುವೆನೆ? ಸಿದ್ಧ ನಾ ಕಣಾ!

ಮೃಗದ ಪಂಜರವನು ಹೊಗುವೆ
ತಳ್ಳು ಅತ್ತ, ಹೇಡಿ ಮಗುವೆ!
ನಮ್ರ ದಾಸನಾಗಿಸುವೆ ಕ್ರೂರ ಸಿಂಹವ!
ಧಗಧಗಿಸುವ ಅಗ್ನಿಜ್ವಾಲೆ
ಸುರಿದು ಸುಡಲಿ ನನ್ನ ಮೇಲೆ
ತಣಿಸಿ ಅದನೆ ಹೊದ್ದು ನಿಲುವೆ, ನಾ ಅಸಂಭವ!

ಅನಾದಿ ನಾ, ಅನಂತ ನಾ, ಅವಧ್ಯ ನಾ ಕಣಾ!
ಸಿಡಿಲಿನ ಮರಿ ಭರತಪುತ್ರ ಬುದ್ಧ ನಾ ಕಣಾ!

ಯಂತ್ರ ತಂತ್ರ ಏನೆ ಇರಲಿ
ಶಸ್ತ್ರ ಅಸ್ತ್ರ ಎಲ್ಲ ಬರಲಿ
ಎದೆಯನೊಡ್ಡಿ ನಿಲುವೆ ಬಿಡದೆ ಆತ್ಮಗೌರವ;
ಹಾಲಾಹಲ ಉಂಡು ನಗುವೆ
ಶತ್ರುಗಳನು ಸೀಳಿ ಸಿಗಿವೆ
ನಾನು ಕಣಾ ವೈರಿಗಳಿಗೆ ಕಾಲಭೈರವ!

ಅನಾದಿ ನಾ, ಅನಂತ ನಾ, ಅವಧ್ಯ ನಾ ಕಣಾ!
ಭಾರತಾಂಬೆ ಮಡಿಲ ಕೂಸು, ನಾ ಸನಾತನಾ!

(ಮೂಲ ಮರಾಠಿ: ವಿನಾಯಕ ದಾಮೋದರ ಸಾವರ್ಕರ್ ಅವರ ಕವಿತೆ 'ಆತ್ಮಬಲ')

Monday, February 17, 2020

ಇದೆ ನಾಳೆ


ಮಗು ನಾನು
ನಿನ್ನೆ ಅಂಗಾತ ಮಲಗಿದರೆ ಹೊರಳುವುದಕ್ಕೂ
ಗೊತ್ತಿಲ್ಲದೆ ಕೈಕಾಲನ್ನಷ್ಟೆ ಬಡಿಯುತ್ತಿದ್ದ ಮಾಂಸಲ
ಮುದ್ದೆ ನಾನು, ಆಮೇಲೆ ನಿನ್ನ
ಎದೆಹಾಲ ಕುಡಿದು ಬೆಳೆದೆನಮ್ಮ
ಹೊರಳಿದೆ, ತೆವಳಿದೆ, ನಿನ್ನ ಬೆಚ್ಚನೆ ತೋಳುಗಳ ತಬ್ಬಿ
ಮಲಗಿದೆ, ನಡೆವ ಕನಸ ಕಂಡೆ, ಕನಸಲ್ಲಿ ನಡೆದು
ಬಂದೆ, ನೀನೆತ್ತಿ ಮುತ್ತಿಟ್ಟು ತಬ್ಬಿದೆ, ನಾನು ಉಬ್ಬಿದೆ.

ನಿನ್ನ ಅಭಯಹಸ್ತ ನನ್ನ ಬೆನ್ನ ಮೇಲಿರುವಾಗ
ನನಗೇತರ ಚಿಂತೆ! ತೆವಳುತ್ತ, ಅಂಬೆಗಾಲಿಡುತ್ತ
ಮನೆಯನ್ನಳೆದೆ, ಅದೊಮ್ಮೆ ಕಾಲಿಗೆ ಬಲ ಬಂತು, ನೆಲಕ್ಕೂರಿದೆ,
ತೊಡೆಗೆ ಬಲ ಬಂತು, ಕೂತೆ, ಮೊಣಕಾಲು ಗಟ್ಟಿಯಾಯಿತು,
ನಿಂತೆ. ನೀನು ಚಪ್ಪಾಳೆ ತಟ್ಟಿ ಅಭಿನಂದಿಸಿದೆ, ಹುರಿದುಂಬಿಸಿದೆ.
ನಾನು ಒಂದೊಂದೆ ಹೆಜ್ಜೆ ಮುಂದಿಟ್ಟೆ, ಬಲ
ಸಾಲದೆ ಮಾಲಿದೆ. ಬಿದ್ದೆ, ತರಚಿತು, ಗಾಯ ಉರಿಯಿತು,
ಕಣ್ಣಿಂದ ಒಂದೆರಡು ಹನಿ ಹರಿಯಿತು, ನಿನ್ನ ಮಮತೆಯ ಕೈ
ಗಾಯದ ಮೇಲೆ ಬೆರಳ ನೇವರಿಸಿ ಒಂದೆರಡು ಸಾಲು ಬರೆಯಿತು,
ನೋವು ಮರೆಸಿತು.

ನಿಂತೆ ಕೊನೆಗೂ ನನ್ನ ಕಾಲ ಮೇಲೇ ನಾನು,
ಕೈಯೆತ್ತಿ ಹಿಡಿದು ಅಪ್ಪಿದೆ ಬಾನು, ನಡೆಯಲು ಕಲಿತೆ
ಒಂದೊಂದೆ ಹೆಜ್ಜೆ ಮುಂದಿಡುತ್ತ ನಿನ್ನ ಬೆರಳ ಹಿಡಿದು;
ನಡೆಯಲಿದೆ ದೃಢವಾಗಿ ನನ್ನ ದಾರಿಯಲ್ಲೇ ನಾನು ಯಾರ
ಆಸರೆ ಬಯಸದೇ, ಓಡಲಿದೆ, ಜಿಗಿಯಲಿದೆ, ಹಾರಲಿಕ್ಕಿದೆ ಮೇಲೆ.
ನಡೆವಾಗ ಎಡವಿದ್ದು, ಉಳುಕಿದ್ದು, ಮುಗ್ಗರಿಸಿ ಬಿದ್ದದ್ದು ಸೋಲೆ?
ಏನಲ್ಲ, ನಡೆವ ದಾರಿಯಲ್ಲೊಂದಷ್ಟು ಸವಾಲು ಅಷ್ಟೆ.
ದಾರಿ ಹೀಗೇ ಇರುವುದು ನಾಳೆಯೂ, ನೆಲ - ಬಾನು
ಇಲ್ಲೇ ಇರುವುದು ನಾಳೆಯೂ, ಇತಿಹಾಸದ ಪುಸ್ತಕದಲ್ಲಿ ಉಳಿದಿದೆ
ಇನ್ನೂ ನೂರಾರು ಹಾಳೆಯೂ.

ಚಿತ್ತಾದರೆ ಅಳಿಸಿ ಅಥವಾ ಹಾಗೆಯೇ ಉಳಿಸಿ
ಹೊಸ ಸಾಲು ಬರೆಯಬಹುದು. ಎಡವಿದರೆ ಮತ್ತೆ ಮೈ ಕೊಡವಿ
ಎದ್ದು ನಡೆಯಬಹುದು. ಪೂರ್ಣವಿರಾಮ ಬಂದೇ ಬಿಟ್ಟರೂ ವಾಕ್ಯ
ಮುಗಿಯಿತೆಂದಲ್ಲ, ಮತ್ತೊಂದರ ಆರಂಭವೂ ಆಗಬಹುದು.
ದಾರಿಯಿದೆ ಇನ್ನೂ, ಗಟ್ಟಿ ಇದೆ ಬೆನ್ನು,
ನಿನ್ನ ಆರೈಕೆ, ಪ್ರೀತಿ, ಹಾರೈಕೆ
ಇದ್ದರೆ ಸಾಕಮ್ಮ ಗೆಲ್ಲುವೆ ಇಂದಲ್ಲ ನಾಳೆ!
ಗೆದ್ದು ಸಂಪಾದಿಸಿ ತರುವೆ ಜಗದ ಚಪ್ಪಾಳೆ!

Thursday, August 22, 2019

ಪ್ರತಿಮೆ

ಸಾವರಕರ ಪ್ರತಿಮೆಗೆ ಮಸಿ ಬಳೆದನಂತೆ
ಯೂನಿವರ್ಸಿಟಿಯ ಒಬ್ಬ ಬುದ್ಧಿಜೀವಿ
ಓದಿದರೆ ನಗು ಬರಲಿಲ್ಲ, ಅಳು ಬರಲಿಲ್ಲ,
ಆವರಿಸಿದ್ದು ಗಾಢ ವಿಷಾದ ಕೂಡ ಹೌದೋ ಅಲ್ಲವೋ ಗೊತ್ತಿಲ್ಲ,
ತುಂಬಿಕೊಂಡದ್ದೊಂದು ಖಾಲಿತನ ಅಷ್ಟೆ.

ಅನ್ನಿಸಿತು
ಪ್ರತಿಮೆಗಳಿರುವುದೇ ಮಸಿ ಬಳೆಸಿಕೊಳ್ಳಲಿಕ್ಕಲ್ಲವೆ,
ಕಾಗೆ ಗುಬ್ಬಚ್ಚಿಗಳ ಪಿಷ್ಟ, ಮಳೆ ಗಾಳಿ ಚಳಿ ಬಿಸಿಲಿನ ಕಷ್ಟ
ಅನುಭವಿಸಿ ಹದವಾಗಲೆಂದೇ ನಿಲ್ಲಿಸುತ್ತಾರೇನೋ
ಅನ್ನಿಸುತ್ತದೆ ದೇಶದಲ್ಲೆಡೆ ಪ್ರತಿಮೆಗಳ ಜಾತ್ರೆ ಕಂಡಾಗ.
ಸಾವರಕರರ ಪ್ರತಿಮೆ ನಿಲ್ಲಿಸದೇ ಇದ್ದಿದ್ದರೆ ಪಾಪ,
ಆ ಹುಡುಗ, ಆ ಶಾಯಿಯನ್ನು ಪರೀಕ್ಷೆ ಬರೆಯುವುದಕ್ಕಾದರೂ
ಬಳಸಿ ಉದ್ಧಾರವಾಗಬಹುದಿತ್ತು.

ಅದಕ್ಕೇ ಇರಬೇಕು ನಮ್ಮಲ್ಲಿ ವಸಿಷ್ಟ, ವಿಶ್ವಾಮಿತ್ರ,
ಭರದ್ವಾಜ, ಮತ್ತೊಂದಿಷ್ಟು ಗೋತ್ರ...
ಯಾರ ಪ್ರತಿಮೆಗಳೂ ಇಲ್ಲ. ನಿಲ್ಲಿಸಬೇಕು ಅಂತಲೂ
ಯಾರಿಗೂ ಅನಿಸಿಲ್ಲ, ಹೋಗಲಿ ವ್ಯಾಸ
ವಾಲ್ಮೀಕಿ ಕಾಳಿದಾಸರ ಪ್ರತಿಮೆಯಾದರೂ
ನಿಲ್ಲಿಸಬಹುದಿತ್ತು. ಅಥವಾ ವೃದ್ಧರೆಂದು ಕನಿಕರಿಸಿ
ಕೂರಿಸಬಹುದಿತ್ತು, ಅದನ್ನೂ ನಮ್ಮ ಜನ
ಮಾಡಲಿಲ್ಲ, ಬುದ್ಧಿವಂತರು!

ಅಥವಾ ಕಮ್ಯುನಿಸ್ಟ ರಾಷ್ಟ್ರಗಳವರಂತೆ ಲೆನಿನ, ಸ್ಟಾಲಿನ, ಮಾವೋ ಜೆಡಾಂಗರ
ಆಕಾಶದೆತ್ತರ ಪ್ರತಿಮೆ ನಿಲ್ಲಿಸಿದಂತೆ ಯಾರಿಗೂ ತಲೆ
ಕಾಣದಂತೆ ಒಂದೆರಡು ಸಾವಿರ ಅಡಿಗಳಷ್ಟುದ್ದ ಪ್ರತಿಮೆಗಳ ಕೆತ್ತಿ
ನಿಲ್ಲಿಸಿದ್ದರೆ ಮಸಿ ಬಳೆಯುವವರೂ ಯೋಚಿಸಬೇಕಿತ್ತು,
ಮಸಿ ಜೊತೆಗೆ ಏಣಿ ತರುವ ಶ್ರಮ ಬೇಡವೆಂದು
ಸುಮ್ಮನಾಗುತ್ತಿದ್ದರೇನೋ.

ಆದ್ದರಿಂದ ನಿಮ್ಮೆಲ್ಲರಲ್ಲಿ ಒಂದು ಬಿನ್ನಹ ಇಷ್ಟೆ:
ನಾನು ಸತ್ತರೆ ನನ್ನ ಪ್ರತಿಮೆ ಮಾಡಿ ನಿಲ್ಲಿಸಬೇಡಿ,
ಗೋರಿಗೊಂದು ಮಂಟಪ ಕಟ್ಟಿ ಹೂಮಾಲೆ ಹಾಕಿ
ಪೂಜಿಸಬೇಡಿ. ಯಾರೋ ಮುಂದಿನ ಶತಮಾನದಲ್ಲಿ
ನನ್ನ ಗುರುತಿಲ್ಲದ ಜನ ಶಾಯಿ ಎರಚಿ (ಅಥವಾ ಕೀಬೋರ್ಡಿನಿಂದ
ತಲೆ ಮೊಟಕಿ) ಚಪ್ಪಲಿ ಅಥವಾ ಶೂಗಳ ಹಾರ ಹಾಕಿ
ಗೌರವ ಸಮರ್ಪಿಸಲು ಅವಕಾಶ ಕೊಡಬೇಡಿ. ನಾನು, ಇನ್ನೂ ನೂರಾರು
ವರುಷ ಒಂದಷ್ಟು ಜನರಿಗೆ ಅಪಥ್ಯವಾಗಿ, ನೆರಳಾಗಿ, ಭೂತವಾಗಿ, ಹಿಡಿಯಲಿಕ್ಕೆ ಸಿಕ್ಕದ
ಪಿಶಾಚಿಯಾಗಿ ಕಾಡಬೇಕಿದೆ, ಅವಕಾಶ ಮಾಡಿಕೊಡಿ. ನನ್ನನ್ನು
ಯಾರ ಕೈಗೂ ಸಿಕ್ಕಿಸಬೇಡಿ, ದಮ್ಮಯ್ಯ.