Tuesday, January 30, 2024

ಲೋಕಸಂಸಾರಿ

ಬರುವರೀಗ, ಬಂದರೇನೊ! 

ಜಗಲಿಯಾಚೆ ನಿಂದರೇನೋ!

ಹೋಗಿಬರುವೆನಮ್ಮ ನೋಡಲೊಮ್ಮೆ

ಕಳಿಸೆಯಾ?


ಹನುಮ ಹರಿಣ ವೈನತೇಯ

ಅರುಣಮಗನ ಬಳಗ ಬಂತು

ಚಿಣ್ಣಿದಾಂಡು ತಂದರೇನೋ,

ನನ್ನ ಇಳಿಸೆಯಾ?


ಬೆಳಗನೆದ್ದು ಹಲ್ಲನುಜ್ಜಿ

ಅಮರ ಹೇಳಿ ಸ್ನಾನ ಮುಗಿಸಿ

ವಿಠ್ಠಲನಾಮ ಸ್ಮರಣೆ ಮಾಡಿ

ಚಾಮಿ ಮಾಡಿದೆ


ತಿಲಕವಿಟ್ಟು ಗಂಧ ಪೂಸಿ

ತಲೆಯ ಬಾಚಿ ಜುಟ್ಟುಕಟ್ಟಿ

ಅಮ್ಮ ನೀನು ನನ್ನನೆತ್ತಿ

ಮಮ್ಮು ಉಣಿಸಿದೆ


ಹಾಲು ಕುಡಿದೆನಮ್ಮ, ಬಿಳಿಯ 

ಮೀಸೆ ಬಂದಿತಮ್ಮ, ಅದನು 

ಕಂಡು ದಾಸಿ ಬಳಗವೆಲ್ಲ 

ಬಿದ್ದುನಕ್ಕರು 


ಅವರ ಮಕ್ಕಳೆಲ್ಲ ಜೊತೆಗೆ

ಬಂದುಕೂಡಿ ಆಟವಾಡೆ

ಬಿಲ್ಲುಬಾಣ ಹೂಡಿದಾಗ

ಮರೆಯ ಹೊಕ್ಕರು


ಅಮ್ಮ ನನ್ನ ಗೆಳೆಯರೆಲ್ಲ

ಬರುವುದುಂಟು, ಬಂದರೇನೋ, 

ಶಬರಿ ಸೀಬೆ ತಂದಳೇನೋ,

ನೋಡಿ ಬರುವೆನು


ಬಟ್ಟೆಯುಟ್ಟು ಮುದ್ರೆ ತೊಟ್ಟು

ವಂಕಿ ವಾಲೆ, ಹಣೆಗೆ ಬೊಟ್ಟು

ಎಲ್ಲ ತೊಟ್ಟೆ, ಮರೆಯಲಿಲ್ಲ

ಕೊರಳ ಸರವನು


ಇಷ್ಟು ಚಂದ ಮಾಡಿಕೊಂಡು

ಅವರ ಮುಂದೆ ಹೋದರವರು

ಗುರುತು ಹಿಡಿವುದುಂಟೆ ನನ್ನ,

ರಾಜಮಾತೆಯೆ!


ರಾಜಮನೆಯ ಭೋಗಭಾಗ್ಯ

ಮೀರಿಬೆಳೆದ ಸ್ನೇಹಭಾಗ್ಯ -

ಸರಳ ಪದವ ಹಾಕಿ ಬರೆದ

ಭಾವಗೀತೆಯೆ!


ಕಾಡಹಣ್ಣು ತಂದರಮ್ಮ, 

ಕಾಡಜೇನು ಕೊಟ್ಟರಮ್ಮ, 

ಬಾಡದಂಥ ಹೂವ ಮಾಲೆ

ಕೊರಳ ಸುತ್ತಲು


ರೆಂಬೆಕೊಂಬೆ ಹತ್ತಿ ಇಳಿದು

ನದಿಯಲೀಜಿ ಗುಡ್ಡವೇರಿ

ಆಟವಾಡಿಕೊಂಡು ಬರುವೆ

ಸಂಜೆಗತ್ತಲು


ರಾಜಮಗನು ಮರೆಯಲಾರೆ

ಹೆಗಲ ಹೊಣೆಯ ಮೀರಲಾರೆ

ಉಚಿತವಲ್ಲದಂಥ ಕೆಲಸ

ನಾನು ಮಾಡೆನು


ಬೆಟ್ಟ ಬಯಲು ಹತ್ತಿಳಿದರು

ಬಟ್ಟೆ ಕೊಳೆಯ ಮಾಡೆನಮ್ಮ

ಒಮ್ಮೆ ಹೋಗಿ ಆಡಿಬರುವೆ

ಮತ್ತೆ ಬೇಡೆನು


ಒಜ್ಜೆಯಲ್ಲವೇನು ಗೆಜ್ಜೆ

ಸೊಂಟಪಟ್ಟಿ ಎದೆಯ ಪದಕ

ಗಂಧ ಕಸ್ತೂರಿ ತಿಲಕ

ಕಂಠಿ ಕಾಡಿಗೆ?


ಬಿಚ್ಚಿ ಗಳಿಗೆ ಹೋಗಿಬರುವೆ

ಅವರ ಕೂಡೆ ಸಮಯಕಳೆದು

ಸಮಯಮೀರೆ ಓಡಿಬರುವೆ

ಮರಳಿ ಗೂಡಿಗೆ


ರಾಜಗೃಹದ ನೀತಿನಿಯಮ

ಹಳ್ಳಿಗಾಡ ಜನಜೀವನ

ಎರಡೂ ಬೇಕು, ನೋಡಬೇಕು

ಲೋಕಜೀವಿ ನಾ


ಎಂದು ಮಾತೆಗೆರಗಿ ನಮಿಸಿ

ಬಂದು ಬಳಗ ಸೇರಿಕೊಂಡು

ಅಳಿಲ ಬೆನ್ನ ನೇವರಿಸಿದ

ರಘುಕುಲೋತ್ತಮ!

ಸುಂದರಕಾಂಡ

ಪಾರಾವಾರವ ದಾಟಿ ಸುದೂರದ 

ದ್ವೀಪಕೆ ಹಾರಿದ ಹನುಮ

ಸೀತೆಯ ಕಾಣುತ ನೆನೆದನು ಮನದಲಿ: 

"ಪಾವನವಾಯಿತು ಜನುಮ!"


ಸೂಜಿಯು ಕರುಳನು ಅರೆಯುವ ಹಾಗೆ 

ವನಚರ ಗೋಳಿಡುತಿತ್ತು

ದುಗುಡದ ಹಬೆಯಲಿ ಬಾಡಿದ ತಾವರೆ 

ಮೌನದಿ ಊಳಿಡುತಿತ್ತು


ಅಶೋಕವನದಲಿ ಶೋಕದ ಮಡುವಲಿ 

ಹೊರಟಿತು ವಿಷಾದಗೀತೆ;

ಹಾಡಿನ ಕಣ್ಣನು ಒರೆಸಿದ ಹನುಮ 

ಬೇಡಿದ: "ಅಳದಿರು ಮಾತೆ!


ಬರುವನು ಬರುವನು ದಶರಥಪುತ್ರನು 

ಮರೆಯದೆ ನಿನ್ನಯ ಬಳಿಗೆ

ದಶಕಂಠಗಳನು ತರಿಯದೆ ಬಿಡನು, 

ಬೇಗನೆ ಬರುವುದು ಘಳಿಗೆ!"


ಬಾಳೆಯ ತೋಟಕೆ ನುಗ್ಗಿದ ಮರಿಗಜ 

ಮಾಡಿದ ದೊಂಬಿಯ ಹಾಗೆ

ಅಶೋಕವನ ಪುಡಿಗುಟ್ಟಿದ ಹನುಮ, 

ಬೆದರಿತು ಪಿಕ ಬಕ ಕಾಗೆ


ಬಂದೇ ಬಂದಿತು ರಕ್ಕಸಸೇನೆ 

ಬೋನಲಿ ತುಂಬಲು ಕೋತಿಯನು

ತಲೆಗಳೊ ತರಗೆಲೆ ತೆರದಲಿ ಬಿದ್ದವು 

ತಾಳದೆ ವಾನರಘಾತವನು


ಕೊನೆಗೂ ರಾವಣಪುತ್ರನೆ ಬಂದ, 

ಮಾಯಾಪಾಶದ ಕುಣಿಕೆಯ ತಂದ

ವಾನರಮುಖ್ಯನ ಬಂಧಿಸಿ ರಾವಣ-

ನೆದುರಲಿ ನಿಲ್ಲಿಸಿ ನಿಂದ


ಕೇಳಿದ ದಶಮುಖ: "ತೋಟಕೆ ನುಗ್ಗಿದ 

ಕೀಟಲೆ ಕೋತಿಯು ನೀನೊ?

ತರಿಯಲೆ ತಲೆಯನು, ಸಿಗಿಯಲೆ ಎದೆಯನು, 

ಸೆರೆಮನೆಗೆಸೆಯಲೇನೊ?


ಇರುವೆಯ ಜಜ್ಜಲು ಗದೆಯನ್ನೆತ್ತಲೆ! 

ನಿನಗಿದೊ ಕ್ಷುಲ್ಲಕ ಶಿಕ್ಷೆ -

ಬಾಲಕೆ ಹಚ್ಚುವೆ ಬೆಂಕಿಯ, ಹೋಗೆಲೊ 

ಬದುಕಿಕೊ ಬೇಡುತ ಭಿಕ್ಷೆ!"


ಎನ್ನಲು ರಾವಣ, ತಂದರು ಎಣ್ಣೆಯ, 

ಹೊಸೆಯಲು ಬಟ್ಟೆಯ ತುಂಡು,

ಬೆಳೆಯಲುತೊಡಗಿದ ಬಾಲವನಳೆಯಲು 

ಬಂದಿತು ರಕ್ಕಸ ದಂಡು!


ಬೆಳೆಯುತ ಅರಮನೆ ಮೀರಿತು, ಬೀದಿಗೆ 

ಬಂದಿತು, ಕೇರಿಯ ತುಂಬ!

ಹಬ್ಬಿತು ಉದ್ದನೆ, ಇಳಿಸಿತು ಬಟ್ಟೆಯ 

ಸುತ್ತುವ ಅಸುರರ ಜಂಬ!


ಬಾಲಕೆ ಬಟ್ಟೆಯ ಸುತ್ತಲು ಅರಮನೆ 

ಗೋದಾಮುಗಳೇ ಬರಿದು,

ಗಾಣದ ಮನೆಗಳ ಉಗ್ರಾಣಗಳೇ 

ಮುಚ್ಚಿದವೆಣ್ಣೆಯ ಸುರಿದು!


ಹಚ್ಚಿದ ಬೆಂಕಿಯ ನಾಲಗೆ ನೆಕ್ಕಿತು 

ಲಂಕೆಯ ಮನೆಮಠ ಓಣಿಗಳ

ಅರಮನೆ-ಬಂಗಲೆ, ಒಳಮನೆ-ಪಡಸಲೆ, 

ದ್ವೀಪದ ಬೆಸ್ತರ ದೋಣಿಗಳ


ಹೊಗೆಯಲಿ ಮುಳುಗಿಸಿ ಲಂಕಾಪುರಿಯನು 

ವಾಯುಪುತ್ರ ಹನುಮಾನ

ಅಯ್ಯೋ ಎಂದನು ಕಳವಳಿಸುತ್ತ, 

ಹುಟ್ಟಲೊಂದು ಅನುಮಾನ - 


ಲಂಕೆಯನೇನೋ ಬೂದಿಯ ಮಾಡಿದೆ, 

ಜಾನಕಿ ಕತೆ ನಾ ಜಾನೆ!

ಬೆಂಕಿಯೆ ಸುಡುವುದೆ ಬೆಂಕಿಯ? ಬೆಂಕಿಯ 

ಮಗಳಲ್ಲವೆ ಆ ಜಾಣೆ!


ಎನ್ನುತ ವಾನರ ತಾಳಿದ ನೆಮ್ಮದಿ, 

ಲಂಕೆಯ ಸುಟ್ಟ ಮೇಲೆ

ಹಚ್ಚಿದ ಕಿಡಿಯಲಿ ನಗರವೆ ನೆಲಸಮ-

ವಾಯಿತು, ಬಾಲದ ಲೀಲೆ!


ಕೆಣಕಲು ಬಂದರೆ ಬಿಡುವನೆ ಹನುಮ, 

ಕೊಡುವನು ಉತ್ತರ ತಕ್ಕ!

ಪೈಸೆಗೆ ಪೈಸೆಯ ಚುಕ್ತಾ ಮಾಡುವ, 

ತಪ್ಪನು ಬಡ್ಡಿಯ ಲೆಕ್ಕ!


ಲಂಕಾಪುರಿಯಲಿ ಬೆಂಕಿಯ ತಾಂಡವ-

ವಾಡಿದ ಹನುಮನು ಕೊನೆಗೆ

ಶರಧಿಯ ನೀರಲಿ ಬಾಲವನಾರಿಸಿ 

ಬಂದನು ರಾಮನ ಕಡೆಗೆ


ಒಂದೇ ಇರುಳಲಿ ಪರನೆಲ ಮುಟ್ಟಿ 

ಸೀತೆಗೆ ಮುದ್ರಿಕೆಯಿತ್ತು,

ರಕ್ಕಸ ಸೊಕ್ಕನು ಮುರಿದ ಹನುಮಬಲ 

ರಾಮನಿಗಷ್ಟೇ ಗೊತ್ತು


ನಿನ್ನುಪಕಾರಕೆ ಕೊಡಲೇನಿಲ್ಲದ 

ಬಡವನೆಂಬ ಅಳು ನುಂಗಿ

ರಾಮ ಕೊಟ್ಟ ಆಲಿಂಗನಭಾಗ್ಯಕೆ 

ಕರಗಿಹೋದ ಭಜರಂಗಿ!

Friday, January 19, 2024

ಅಯೋಧ್ಯಾಗಮನ

ಹೊರಟೆವು ನಾವು, ಬರುವಿರ ನೀವು

ರಾಮನ ಮನೆಗೆ ನಮ್ಮ ಜತೆ?

ದಾರಿಯ ಖರ್ಚಿಗೆ ಬೇಕಾದಷ್ಟಿದೆ

ಹಾಡಲು ಹೇಳಲು ರಾಮಕಥೆ


ದಂಡಕೆ ದಂಡು ಹಾರಿದೆ ಬಾನಿಗೆ

ಗಿಳಿ ಗೊರವಂಕ ಗುಬ್ಬಚ್ಚಿ

ಹದ್ದಿನ ಹಾದಿಯ ಕೋಳಿಯೂ ಹಿಡಿದಿದೆ

ಸೇರುವುದೆಂತೋ ಪಾಪಚ್ಚಿ!


ಕಾಡಿನ ಸಭೆಯಲಿ ಸೇರಿವೆ ಜಿಂಕೆ

ಮೊಲ ನರಿ ಅಜ ಗಜ ಶಾರ್ದೂಲ

ದಿಬ್ಬಣ ಹೊರಟಿವೆ ರಾಮನ ಕಡೆಗೆ

ಹಾಡಿವೆ ಕೋಗಿಲೆ ಹಿಮ್ಮೇಳ


ಸಾವಿರ ಸಂಖ್ಯೆಯ ವಾನರ ಹಿಂಡು

ಉತ್ಸವ ಹೊರಟಿದೆ ಉತ್ತರಕೆ

ಮರದಲ್ಲಾಡುತ ಜಿಗಿಜಿಗಿದೋಡುತ

ಕುಪ್ಪಳಿಸುತ ಬಾನೆತ್ತರಕೆ


ರಾಮ ನಡೆದ ಗೋದಾವರಿಯಲ್ಲಿ,

ಚಿತ್ರಕೂಟದ ಕಾಡಿನಲಿ,

ಪಂಚವಟಿಯ ಜಲ ನೆಲ ಬಾನಲ್ಲಿ,

ಬೆಸ್ತರ ಬೇಡರ ಹಾಡಿಯಲಿ


ಎಲ್ಲೆಲ್ಲೂ ಹೊಸ ಸಂಭ್ರಮ ತುಂಬಿದೆ

ಹೊರಡುವ ಗಡಿಬಿಡಿ ಎಲ್ಲ ಕಡೆ

ಕೆದರಿದ ಕೂದಲ ಬಾಚಿದ ಜಾಂಬವ,

ಶಬರಿಯು ಹೆಣೆದಳು ಎರಡು ಜಡೆ


ಮಾವಿನ ತೋರಣ ಕಟ್ಟಿತು ಕರಡಿ,

ಅಳಿಲಿನ ಬಾಯಲಿ ನೆಲಗಡಲೆ,

ಹೊರಟವು ಹೂಗಳು ಬುಟ್ಟಿಯ ತುಂಬ

ಕೇಳಿತು ನಾರು: ಜೊತೆಗಿರಲೆ?


ಸರಯೂ ಜಲಚರ, ಮತಂಗ ಗಿರಿಚರ

ಎಲ್ಲವು ಹೊರಟಿವೆ ಜತೆಯಲ್ಲಿ

ಲಂಕೆಯ ವನಕೂ ಮಿಥಿಲೆಯ ಜನಕೂ

ಜಾಗವುಂಟು ಈ ಕಥೆಯಲ್ಲಿ


ರಾಮನ ಹೊಸಮನೆಯಂಗಳ ತುಂಬಿದೆ,

ಕ್ರೌಂಚವ ಹಿಡಿದಿಹ ವಾಲ್ಮೀಕಿ,

ಸುತ್ತಲ ಖಗಮಿಗವೆಲ್ಲಾ ಹಾಡಿದೆ -

ಜಯ ಬೋಲೋ ರಘುರಾಮ ಕೀ! 

ಸೀತಾರಾಮ ಹನುಮಾನ ಕೀ!