ಗೋಪಾಲ ಹೇಳು, ಎದೆ ಹಗುರ ಮಾಡು
ನೀನೋಡುತಿರುವೆ ಎಲ್ಲಿ?
ಈ ಗೋಪಬಾಲೆ ನಿನಗಾಗಿ ಕಾದು
ಬತ್ತಿದೆನು ಯಮುನೆಯಲ್ಲಿ
ನಿನ್ನ ಬೆರಳಾಟವಿಲ್ಲದೆ
ನಿಟ್ಟುಸಿರಿಟ್ಟಿದೆ ಸೆರಗಂಚು
ನಿನ್ನ ಕೊಳಲ ದನಿಗದುರುವ
ಕಿವಿಗಳಿಗೂ ತುಸು ಸಿಹಿ ಹಂಚು
ಬತ್ತಿದ ಕೊಳದ ಒಡೆದ ತಳದಂತೆ
ಏತಕೆ ಈ ಮೌನ?
ಕಡಲ ನಡುವಲ್ಲಿ ಹಾಯಿ ಹರಿಯದಿರು
ಮುಂದುವರೆಸು ಯಾನ.
ರಾಧೆಯೊಳಗೆ ಹರಿಯುತ್ತಿದೆ ಯಮುನೆ
ದುಃಖದ ತೆರೆಗಳ ಹೊತ್ತು
ದುಂಬಿಗಳಿಲ್ಲದ ತೋಟದಲರಳಿದ
ಹೂವಿಗಷ್ಟೆ ಅದು ಗೊತ್ತು
ಬರುವನೆಂದು ಬಂದಾನೇ ಎಂದು
ಕಾದಿರುವಳು ರಾಧೆ
ಹೇಳದೆ ಹೋಗೇಬಿಡುವೆಯ? ಮರೆತೆಯ?
ನಾನೇಕೆ ಬೇಡವಾದೆ?
ಈ ಬೆಳುದಿಂಗಳು, ಈ ಬೃಂದಾವನ
ತರುಲತೆಪಕ್ಷಿಯ ಶೋಕ
ಕಂಡೂ ಕಂಡೂ ಹೋಗೇ ಬಿಡುವೆಯ?
ಕರೆಯಿತಾವ ಲೋಕ?
ಕುಳಿರ್ಗಾಳಿಯ ಕುಲುಮೆಯಲ್ಲಿ
ಕೂತಿರುವೆನು ಕಲ್ಲಾಗಿ
ಒಡೆದೆರಡಾದ ಬಿದಿರಿನ
ಪ್ರೇಮಾಲಾಪದ ಸೊಲ್ಲಾಗಿ.
(ಒಂದು ಹಳೆ-ಅಸ್ಸಾಮೀಸ್ ನಲ್ಲಿರುವ ಪದ್ಯದ ಭಾವಾನುವಾದ)
ದುಃಖದ ತೆರೆಗಳ ಹೊತ್ತು
ReplyDeleteದುಂಬಿಗಳಿಲ್ಲದ ತೋಟದಲರಳಿದ
ಹೂವಿಗಷ್ಟೆ ಅದು ಗೊತ್ತು "- ಸಾಲುಗಳು ಇಷ್ಟವಾದವು