ಬಂತು ಮಳೆ ಬರಬಾರದಿದ್ದರೂ ಜನವರಿಗೆ
ಹಾಡುತಿವೆ ಹಕ್ಕಿಗಳು ದೂರದಲ್ಲಿ
ಮೂರುದಿನಗಳ ಬಳಿಕ ಮಿಂದ ನೀರೆಯ ಹೆರಳ
ಹಾಗೆ ಮೊಲ್ಲೆಯ ಮಾಲೆ ಪಾತಿಯಲ್ಲಿ
ನೋಡಿದರೆ ಆಕಾಶ ಶುಭ್ರ ಹಾಲಿನ ಬಣ್ಣ
ಎಲ್ಲಿ ಹೋಯಿತು ಮೋಡ ತಿಳಿಯಲಿಲ್ಲ
ಹತ್ತಾದರೂ ಹೊತ್ತು ಕಣ್ಣು ತೆರೆಯದ ಸೂರ್ಯ
ಮುಗಿಲ ಹಾಳೆಗೆ ಬಣ್ಣ ಬಳಿಯಲಿಲ್ಲ
ಮಾಮರದ ಹೂವುಗಳು ಚಿಗುರಿ ನಿಂತಿವೆ ಮೇಲೆ
ಸಂಕ್ರಾಂತಿಯಲ್ಲೆಳೆದ ತೇರಿನಂತೆ
ತೊತ್ತಿಕ್ಕುತಿವೆ ಆಲದಿಂದ ಒಂದೊಂದೆ ಹನಿ
ಸರದಿಂದ ಮುತ್ತಮಣಿ ಜಾರಿದಂತೆ
ನಾದಲೀಲೆಯ ಅಲೆಗಳಲ್ಲಲ್ಲಿ ಕೇಳುತಿವೆ
ಜೀವಸೆಲೆಯಾಡುತಿದೆ ಹಳೆಯ ಬೇರು
ರಸ್ತೆಯುದ್ದಾನುದ್ದ ಕಸ, ಕೆಸರು, ಅಂಟುನೆಲ
ಕೊಚ್ಚಿ ಹೋಗಿದೆ ಸಂತೆ, ಒದ್ದೆ ಊರು
ಮಳೆ ಬಂದ ಭಯದಲ್ಲಿ ಕೊಡೆ ಹುಡುಕಹೋದವರು
ಇಂಥ ಸೊಬಗಿನ ಬೆಳಗು ನೋಡಲಿಲ್ಲ
ನೆಲದೊಡಲು ಒಡೆದು ಹೊರಬಂದ ಮಣ್ಣಿನ ಗಂಧ
ಏಸಿ ಕಾರಿನ ಒಳಗೆ ಹಾಯಲಿಲ್ಲ.
(ನಾನು ಶಾಲೆ ಕಲಿಯುತ್ತಿದ್ದಾಗ ಬರೆದ ಪದ್ಯ. ಒಂದು ಸಲ ಜನವರಿಯಲ್ಲಿ ಮಳೆ ಬಂದು ಹೋದ ಮೇಲೆ, ಮನೆಯ ಟೆರೆಸಿನಲ್ಲಿ ಕೂತು ಬರೆದದ್ದು..)
No comments:
Post a Comment