Thursday, May 27, 2010

ಬ್ರಹ್ಮಗಂಟು

ಏನಾದರಾಗಲಿ ಈ ಬಾರಿ
ಹೇಳಲೇಬೇಕು ನಿಜ ಅಂದು
ಕೊಂಡವನೆ ಊರಿಗೆ ಹೋದಾಗ ಯಾಕೋ
ಈ ಹಾಳು ಬೇಸಗೆಯ
ವಿಪರೀತ ಸೆಖೆಯಲ್ಲು ಅಂಗಿ
ಬಿಚ್ಚದೆ ಓಡಾಡಿದೆ

ಬಚ್ಚಲಿಗೆ ಹೋದಾಗಲೂ ಕಳ್ಳ
ನ ಹಾಗೆ ಓಡಿ, ಬಂದು
ಪಾಣಿಪಂಚೆಯಿಂದ ಮುಚ್ಚಿ
ಕೊಂಡು ಬೆವರುತ್ತ ಬೇಗುದಿ
ಪಟ್ಟೆ

ಈ ನಿಮ್ಮ ಆಚಾರ ಕಟ್ಟು
ಕಟ್ಟಳೆ ಕರ್ಮ ಬೇಡವೇ
ಬೇಡ ಅಂತ ಎಸೆದಿದ್ದೇನೆ ಇಗೋ
ಅಂತ ಬರಿಮೈ ತೋರಿಸಿ ಬೆಚ್ಚಿ
ಬೀಳಿಸಬೇಕೆಂದುಕೊಂಡವನು
ಹೀಗೇಕೆ ಆದೇನೋ ಅಂತ

ಬೇಜಾರಾಗಿ ದೇವರ ಮನೆ
ಹಳೆಪೆಟ್ಟಿಗೆ ತೆರೆದು ದಾರದ
ಉಂಡೆ ಬಿಚ್ಚಿ
"ಯಜ್ನೋಪವೀತಂ ಪರಮಂ ಪವಿತ್ರಂ...."
ಅಂತ ಮೂರ್ಮೂರು ಸಾರಿ
ತಪ್ಪೊಪ್ಪಿಗೆಯ ಹಾಗೆ
ಹೇಳಿ ಹಾಕ್ಕೊಂಡೆ

ನೋಡಿ, ಎಷ್ಟು
ಹಾಯೆನಿಸಿತಪ್ಪ!

No comments:

Post a Comment