Wednesday, May 26, 2010

ಪರಕಾಯ ಪ್ರವೇಶ

ಒಮ್ಮೆ ನಿತ್ಯಾ
ನಂದ ಸ್ವಾಮಿಗಳು ಅಂತ
ಒಬ್ಬರು

ಹೇಳತಾ ಇದ್ದರು -

ಈ 'ನಾನು' ಅನ್ನುವುದು ವಿಚಿತ್ರ -
ತೊಟ್ಟ ಅಂಗಿ ಕಳಚಿ
ಎಸೆದ ಹಾಗೆ ಈ ನಾನು ಆಗಾಗ
ಬದಲಾಯಿಸಿ ಮೈ, ಕೈ
ಹಿಡಿತಕ್ಕೆ ಸಿಗದೇ ಹಾರುವುದುಂಟು

ನೀವೀಗ ನೀವು ಅಂದು
ಕೊಂಡರೆ ಅದು ನೀವಲ್ಲ, ನಾನು
ನಾನಲ್ಲ.

ಬಹಳ ಚಾಲಾಕಿ ಈ
ನಾನು, ಸಿಗದು ಯಾರ
ಸುತ್ತಿಗೆ ಪೆಟ್ಟಿಗೂ,
ಯಾವ ಬಂಧನ, ಕಟ್ಟಿಗೂ.
ಹಾರುತ್ತ ಇರುವುದು ಮೈ
ಯಿಂದ ಮೈಗೆ, ನೊಣ
ದಂತೆ, ಘನ ಕರಗಿ ಹೊಗೆಯಾದ
ಮೇಣದಂತೆ, ಯಾವ ಕೆಮರದ
ಕಣ್ಣಿಗೂ ಕಾಣದಂತೆ.

ಅವರು ಹೇಳಿದ್ದು
ಕೇಳುತ್ತ ಕೂತರೆ ನಮಗೆ ನಾವೇ
ಖುರ್ಚಿ ಬಿಟ್ಟೆದ್ದು ಅಲೆದಾಡಿದ
ಹಾಗೆ ಬೇತಾಳನಂತೆ, ಯಾವುದೋ
ಮರದ ಕೊಂಬೆಗೆ ತಲೆ
ಕೆಳಗಾಗಿ ತೂಗಾಡಿದಂತೆ
ಆಗುವುದುಂಟು

ಅದು ನಿಜವಾಗಿ ನಾವೊ
ಅಲ್ಲವೋ ಅನ್ನುವುದೂ
ಖಚಿತವಿಲ್ಲ!

ಹೇಳುತ್ತಾರೆ - ನಾನು ಎಣ್ಣೆ
ಯ ಹಾಗೆ ಪಾತ್ರೆಗೆ,
ಚಂದ್ರಮನ ಹಾಗೆ ರಾತ್ರಿಗೆ -
ಶಾಶ್ವತವಲ್ಲ.

ಯಾವ ಕ್ಷಣ
ದಲ್ಲಾದರೂ ಬಿಡಬಹುದು ಈ
ಜೀವ, ಇನ್ನೊಂದನ್ನು
ಹಿಡಿಯಬಹುದು, ಎಲ್ಲ - ಅಂಗಿ
ಕಳಚಿ ಮತ್ತೊಂದು ತೊಟ್ಟ
ಹಾಗೆ, ಹಳೆಯದನ್ನು ಬಿಟ್ಟ
ಹಾಗೆ.

ನಾನು ಎನ್ನುವುದು
ಸರಿದಾಡುತ್ತಲೆ ತಥ್
ಕ್ಷಣ ಪೊರೆ ಕಳಚಿ ಹೊರಬಂದು
ಸರಿದಾಡುತ್ತ ಮುಂದೆ
ಹೋದಂತೆ ಹಾವು.

ಬಿಡಿ ಸ್ವಾಮಿ, ಅವರ ಹಾಗೆ
ಆಗುವುದುಂತೆ, ನಾವು?

1 comment:

  1. ನಾನು ಎನ್ನುವುದು
    ಸರಿದಾಡುತ್ತಲೆ ತಥ್
    ಕ್ಷಣ ಪೊರೆ ಕಳಚಿ ಹೊರಬಂದು
    ಸರಿದಾಡುತ್ತ ಮುಂದೆ
    ಹೋದಂತೆ ಹಾವು.

    ಸರಿಯಾಗಿ ಹೇಳಿದ್ದೀರ...ತು೦ಬಾ ಚೆನ್ನಾಗಿ...

    ReplyDelete