Friday, May 28, 2010

ಊರ್ಧ್ವಮೂಲ

ರಣಪೀಡೆ ಅಂತಾರಂತೆ ಈ ಕಡೆ
ಜನ - ಉದ್ದ ಮೂಗಿನ ಸೊಟ್ಟ
ಮೂತಿ ಕೆದರಿದ ತಲೆ
ನೀರಿಲ್ಲದೆ ಸತ್ತವರ ಪಿಶಾಚಿ

ರಾತ್ರಿ ಬಲೆ ಬೀಸೋಣ ಅಂತ
ಹೋದವರು ಬೀಸಿದ
ಬಲೆಗೆ ಬಿದ್ದ ಮೀನಷ್ಟನ್ನು
ತಂದು ಹರಡಿ ಮರಳ ಮೇಲೆ
ಒರಗೋಣ ಅಂತ
ಬಿದ್ದರೆ

ಕಳ್ಳ ಕಳ್ಳ ಹೆಜ್ಜೆ ಇತ್ತು ಬಂದ ಪೀಡೆ
ತಲೆ ಬಳಿ ಕೂತು
ಮರಲೋಕ್ಕಿ ಎರಡಡಿ ಹೊಂಡ ತೋಡಿ
ತಲೆಯಿಟ್ಟು ನಿಧಿಯ
ಹಾಗೆ ಮರಳು ಮುಚ್ಚಿ ಸದ್ದಿಲ್ಲದೆ
ಪರಾರಿಯಾಗುತ್ತಂತೆ

ಇಂಥ ಒಂದು ಸಾವು
ಕಂಡ ದಿನ
ರಾತ್ರಿ ಕಂಡ ಕನಸಲ್ಲಿ ಅದೇ

ಭೂತ ಬಂದು ನನ್ನ
ತಲೆ ಹೂತು ಮಣ್ಣು
ಮುಚ್ಚಿ ಹೋದಾಗ, ಕೈಕಾಲು
ಸೊಂಟವೆದ್ದು

ಬುಡಮೇಲು ಅಶ್ವತ್ಥವಾಗಿ
ನಿಂತಂತಾಗಿ ದಿಗಿಲಾಗಿ ಧಿಗ್ಗನೆದ್ದು
ನೀರು ಕುಡಿದೆ.

No comments:

Post a Comment